ಯಕ್ಷಗಾನ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು : ಕಬ್ಬಿನಾಲೆ ವಸಂತ್ ಭಾರಧ್ವಾಜ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜುಲೈ 20 , 2015
|
ಜುಲೈ 20, 2015
|
ಯಕ್ಷಗಾನ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು : ಕಬ್ಬಿನಾಲೆ ವಸಂತ್ ಭಾರಧ್ವಾಜ್
ಬೆಂಗಳೂರು :
ಯಕ್ಷಗಾನದ ಅಶಕ್ತ ಕಲಾವಿದರಿಗೆ ನೆರವು ನೀಡುವ ಜತೆಗೆ ಸಶಕ್ತ ಕಲಾವಿದರನ್ನೂ ಪುರಸ್ಕರಿಸಬೇಕು. ರಾಜ್ಯದಲ್ಲಿ 10 ಸಾವಿರ ಯಕ್ಷಗಾನ ಕಲಾವಿದರಿದ್ದು, ಅವರನ್ನೆಲ್ಲಾ ಗುರುತಿಸುವ ಕೆಲಸ ಆಗಬೇಕಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ಅಭಿಪ್ರಾಯಪಟ್ಟರು.
ರಂಗಸ್ಥಳ ಯಕ್ಷಮಿತ್ರ ಕೂಟದಿಂದ ಎಡಿಎ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಹದಿನೈದನೆ ವಾರ್ಷಿಕೋತ್ಸವ ಹಾಗೂ 'ರಂಗಸ್ಥಳ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
''ಯಕ್ಷಗಾನದ ಕಲಾವಿದರನ್ನು ಪುರಸ್ಕರಿಸಲು ಸರಕಾರದ ಮುಂದೆ ಕೈಚಾಚುವ ಬದಲು ಜ್ಞಾನಪೀಠದ ರೀತಿಯಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಯೋಚಿಸಬೇಕಿದೆ. ಅದೇ ರೀತಿ ಯಕ್ಷಗಾನದಲ್ಲಿ ಆಡುಭಾಷೆಯ ಪ್ರವೇಶ ಸರಿಯಲ್ಲ. ಶಿರಸಿಯ ಬೀದಿ ಭಾಷೆ, ಬ್ರಹ್ಮಾವರದ ಅಂಗಡಿಯ ಭಾಷೆ ಅಲ್ಲಿರಬಾರದು. ಏನಿದ್ದರೂ ಕಾವ್ಯ ಭಾಷೆಯ ಬಳಕೆಯಾಗಬೇಕು. ಆದರೆ, ಯಕ್ಷಗಾನವನ್ನು ಅಶಾಸ್ತ್ರೀಯಗೊಳಿಸಲಾಗುತ್ತಿದ್ದು, ಹೀಗಾಗಿ ಅದರ ವ್ಯಾಕರಣವನ್ನು ಸರಿ ಮಾಡಬೇಕಿದೆ,'' ಎಂದು ಹೇಳಿದರು.
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ ''ಕಲೆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸಮರ್ಪಕವಾಗಿ ಚಿತ್ರಿಸಲು ಮತ್ತು ಪರಿವರ್ತಿಸಲು ಸಾಧ್ಯವಿದೆ,'' ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ರವಿ ಹೆಗಡೆ ಮಾತನಾಡಿ ''ಕಲೆ ಮತ್ತು ನಿಸರ್ಗ ಇವೆರಡೂ ಒಂದು ದೇಶ ಅಥವಾ ನಾಡಿನ ಆಸ್ತಿ ಎನಿಸಿಕೊಳ್ಳುವ ಮೂಲಕ ಪಾರಂಪರಿಕ ಮೌಲ್ಯವನ್ನು ಪ್ರತಿ ಬಿಂಬಿಸುತ್ತವೆ. ಆದರೆ, ಯಕ್ಷಗಾನ ಅಂತಹ ಕಲೆ. ಆದರೆ, ಆ ಕಲಾವಿದರ ಜೀವನಕ್ಕೆ ಪೆಟ್ಟು ಬಿದ್ದಿದೆ. ಆಟೊ, ಅಂಗಡಿ, ಮನೆ, ಆಕಳಿಗೆ ವಿಮೆ ಮಾಡಿಸುವ ನಾವು ಕಲಾವಿದರಿಗೆ ಯಾವ ವಿಮೆ ಮಾಡಿಸುತ್ತಿದ್ದೇವೆ ಎಂದು ಪ್ರಶ್ನಿಸಿದ ಅವರು, ಈ ಯಕ್ಷಗಾನ ಅಕಾಡೆಮಿ ಮೂಲಕ ಕಲಾವಿದರಿಗೆ ವಿಮಾ ಸೌಲಭ್ಯ ಒದಗಿಸುವ ಸಂಬಂಧ ಚರ್ಚೆ ನಡೆಯಬೇಕು,'' ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಮುಮ್ಮೇಳ ಕಲಾವಿದ ಶ್ರೀರಾಮ ಹೆಗಡೆ ಚಿಟ್ಟಾಣಿ, ಯಕ್ಷಗಾನ ಹಿಮ್ಮೇಳ ಕಲಾವಿದ ಮಾರ್ವಿ ನಿತ್ಯಾನಂದ ಹೆಬ್ಬಾರ ಅವರಿಗೆ 'ರಂಗಸ್ಥಳ ಪ್ರಶಸ್ತಿ' ಹಾಗೂ ಅಶಕ್ತ ಪೋಷಕ ಕಲಾವಿದರಾದ ನಾರಾಯಣನಾಯ್ಕ, ಜನಾರ್ದನ ಜೋಗಿ, ಸುಳುಗೋಡು ನಾರಾಯಣ, ಪಡುಕೋಣೆ ಸೂರ್ಯ ಗಾಣಿಗ ಮತ್ತಿತರರಿಗೆ ಮಾಸಾಶನದ ಚೆಕ್ಕುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ರಂಗಮಂಟಪ ಕಲಾವಿದರು ವೈದೇಹಿ ಅವರ ಕಥೆಗಳ ಆಧಾರಿತ 'ಅಕ್ಕು' ನಾಟಕ ಪ್ರದರ್ಶಿಸಿದರು. ಆನಂತರ ಶ್ರೀ ಕ್ಷೇತ್ರ ಸಾಲಿಗ್ರಾಮ ಮೇಳದವರಿಂದ 'ಗದಾಯುದ್ಧ' ಯಕ್ಷಗಾನ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ಬಿ.ಎಸ್.ಆರ್.ಡೆವಲಪರ್ಸ್ನ ರಾಮೋಜಿ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನಪೀಠದಂತಹ ಪ್ರಶಸ್ತಿ ಸ್ಥಾಪನೆಯಾಗಲಿ ''ಖಾಸಗಿ ಸಂಸ್ಥೆಗಳ ಮೂಲಕವೇ ನೀಡುತ್ತಿರುವ ಜ್ಞಾನಪೀಠ ಪ್ರಶಸ್ತಿಯಂತೆ ಯಕ್ಷಗಾನದಲ್ಲೂ ಇಂತಹದ್ದೊಂದು ಮಹತ್ತರ ಪ್ರಶಸ್ತಿ ಸ್ಥಾಪಿಸಿ ಈಖ ಕ್ಷೇತ್ರದಲ್ಲಿನ ಜೀವಮಾನ ಸಾಧನೆ ಪ್ರಶಸ್ತಿ(ಕನಿಷ್ಠ 5 ಲಕ್ಷ ರೂ. ನಗದು) ನೀಡಬೇಕು. ಎಲ್ಲ ಸಂಘ, ಸಂಸ್ಥೆಗಳೂ ಒಟ್ಟಾಗಿ ಸೇರಿ ನೀಡುವ ಬಗ್ಗೆ ಯೋಚಿಸಬೇಕು,'' ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್ ಹೇಳಿದರು.
ಕೃಪೆ :
vijaykarnataka
|
|
|